Sunday, December 7, 2008

ಮಂಡ್ಯ ಟು ದುಬೈ

"ಹರೀಶ್ ಗೆ ದುಬೈನಲ್ಲಿ ಕೆಲಸ ಸಿಕ್ಕಿದೆಯಂತೆ. ಅದಕ್ಕೆ ಹೋಗು ಅಂಥ ನೀನೂ ಹೇಳು ಗುರುವೇ.."
ಹುಣಸೂರಿನಿಂದ ಗೆಳೆಯ ರವಿ ಫೋನ್ ಮಾಡಿ ಹಾಗಂದ. ನನಗೆ ತುಂಬಾ ಖುಷಿಯಾಯಿತು. ಎಲ್ಲಿಯ ಮಂಡ್ಯ, ಎಲ್ಲಿಯ ದುಬೈ? ಅಂತೂ ಹರೀಶ್ ಅವರ ಕಷ್ಟದ ದಿನಗಳು ಮುಗಿಯುವ ಕಾಲ ಬಂತಲ್ಲಾ ಎಂದು ಸಂಭ್ರಮಿಸಿದೆ. ಮುಂದಿನ ಸಾರಿ ಮಂಡ್ಯಕ್ಕೆ ಹೋದಾಗ ಅವರನ್ನು ಭೇಟಿ ಮಾಡಿಯೇ ತೀರಬೇಕು ಎಂದು ನಿರ್ಧರಿಸಿದೆ. ಅವರನ್ನು ಭೇಟಿ ಮಾಡಿ ಮಾತನಾಡಿಯೂ ಬಂದೆ.

ಭೇಟಿಯ ವಿವರಗಳನ್ನು ಹೇಳುವ ಮೊದಲು ನಿಮಗೆ ಹರೀಶ್, ರವಿ ಯಾರೆಂದು ಹೇಳಬೇಕು.

ನನ್ನ ಹುಟ್ಟೂರು ಮಂಡ್ಯದಲ್ಲಿ "ಉದಯಕಾಲ" ಎಂಬ ಪತ್ರಿಕೆಯಿದೆ. ಈಗ ಅದರ ಮಾಲೀಕರು ಒಬ್ಬ ಹೋಟೆಲ್ ಉದ್ಯಮಿ. ಆ ಪತ್ರಿಕೆ ಸ್ಥಾಪಿಸಿದವರು ಎಚ್.ಎಲ್. ಕೇಶವಮೂರ್ತಿ. ಅವರು ಲಂಕೇಶ್ ಪತ್ರಿಕೆಯ ಅಂಕಣಕಾರರು. ಕೆಲ ವರ್ಷ ಅವರ ಸಂಪಾದಕತ್ವದಲ್ಲಿ ಪತ್ರಿಕೆ ಚೆನ್ನಾಗಿ ಮೂಡಿ ಬರುತ್ತಿತ್ತು. ಅನಿವಾರ್ಯ ಕಾರಣಗಳಿಂದ ಅವರು ಪತ್ರಿಕೆಯನ್ನು ಮಾರಿದರು. ಆಗ ಅದನ್ನು ಕೊಂಡುಕೊಂಡವರು ಮಂಡ್ಯದಲ್ಲಿ "ರೌಡಿಗಳ ಬಾಸ್" ಆಗಿದ್ದ ಎಸ್.ಕೆ. ರಾಮಣ್ಣ.

ಆ ಪತ್ರಿಕೆಯಲ್ಲಿ ಹರೀಶ್ ಕಂಪ್ಯೂಟರ್ ಆಪರೇಟರ್ ಆಗಿದ್ದರು. ಅಲ್ಲಿಗೆ ಕೆಲಸಕ್ಕೆ ಸೇರಿದಾಗ ನನಗೆ ಅವರ ಪರಿಚಯವಾಯಿತು. ಕೆಲಸದ ವಿಷಯದಲ್ಲಿ ನನಗೆ ಏನೂ ಗೊತ್ತಿರಲಿಲ್ಲ. ಹರೀಶ್ ಅವರ ವಿಶೇಷ ಏನೂ ಅಂದರೆ, ಅವರು ಕೋಪ ಮಾಡಿಕೊಳ್ಳುವುದಿಲ್ಲ. ಕಂಪ್ಯೂಟರ್ ವಿಷಯದಲ್ಲಿ ಎಷ್ಟು ಸಲ ಕೇಳಿದರೂ ಸ್ವಲ್ಪವೂ ಬೇಸರವಿಲ್ಲದೆ ಹೇಳಿಕೊಡುತ್ತಿದ್ದರು. ನನಗೆ ಇತಿಹಾಸ, ರಾಜಕಾರಣ ಗೊತ್ತಾಗದಿದ್ದರೆ ಅವರನ್ನು ಕೇಳುತ್ತಿದ್ದೆ. ಅದನ್ನೂ ವಿವರವಾಗಿ ಹೇಳಿಕೊಡುತ್ತಿದ್ದರು. ಅದೇ ಕಚೇರಿಯಲ್ಲಿ ರವಿ ಸಹ ಇದ್ದ.

ರವಿ ಹಾಗೂ ನನಗಿಂತ ಹರೀಶ್ ಅವರು ವಯಸ್ಸಿನಲ್ಲಿ ದೊಡ್ಡವರು. ಜೀವನದ ಬಂಡಿ ಸಾಗಿಸಲು ಅವರು ಪಡುತ್ತಿದ್ದ ಕಷ್ಟ ನಮ್ಮೆಲ್ಲರಿಗೂ ಗೊತ್ತಿತ್ತು. ಬೆಂಗಳೂರಿನಲ್ಲಿ ವ್ಯಂಗ್ಯಚಿತ್ರಕಾರರೂ, ಪಾಕ್ಷಿಕ ಪತ್ರಿಕೆಯೊಂದರ ಸಂಪಾದಕರೂ ಆಗಿರುವ ಸತೀಶ್ ಬಾಬು ನಮಗೆಲ್ಲಾ ಮುಖ್ಯಸ್ಥರಾಗಿದ್ದರು.

ಹರೀಶ್ ಅವರು ಮೂಲತಃ ಚಾಮರಾಜನಗರದವರಾಗಿದ್ದರೂ ಚಿಕ್ಕಂದಿನಲ್ಲೇ ಮಂಡ್ಯಕ್ಕೆ ವಲಸೆ ಬಂದಿದ್ದರು. ತಂದೆ, ತಾಯಿ, ತಂಗಿಯುಳ್ಳ ಪುಟ್ಟ ಕುಟುಂಬ. ಅಕಾಲದಲ್ಲಿ ತಾಯಿ ತೀರಿಕೊಂಡರು. ತಂದೆ ಎಲ್ಲಿಗೋ ಹೋದರು. ಅಷ್ಟರಲ್ಲಿ ತಂಗಿ ಮದುವೆಯಾಗಿತ್ತು. ತಂಗಿಯ ಗಂಡ ಬೇರೆಲ್ಲೋ ಕೆಲಸ ಮಾಡುತ್ತಿದ್ದುದರಿಂದ ಅವರ ತಂಗಿ ಹರೀಶ್ ಮನೆಯಲ್ಲಿ ಉಳಿದುಕೊಂಡಿದ್ದರು. ಅವರ ಮಕ್ಕಳ ವಿದ್ಯಾಭ್ಯಾಸ, ಮನೆಯ ನಿತ್ಯ ಖರ್ಚು ಎಲ್ಲವನ್ನೂ ಹರೀಶ್ ನೋಡಿಕೊಳ್ಳುತ್ತಿದ್ದರು. ಅವರಿಗೆ ಬರುತ್ತಿದ್ದ ಸಂಬಳ ಕೇವಲ 2500 ರುಪಾಯಿ.

ಬದುಕುವುದಕ್ಕೆ ಬೇಕಾದ ಉತ್ಸಾಹ, ಲವಲವಿಕೆ ಹರೀಶ್ ಅವರನ್ನು ನೋಡಿದರೆ ನಮಗೆ ಸಿಗುತ್ತಿತ್ತು. ಅವರು ಕಷ್ಟಪಟ್ಟು ದುಡಿಯುತ್ತಾರೆ, ಮೋಸ ಮಾಡಬೇಕೆಂಬ ಭಾವನೆ ಅವರಿಗಿಲ್ಲ. ದುರಹಂಕಾರ ಮೊದಲೇ ಇಲ್ಲ. ಬಂದ ಸಣ್ಣ ಕಾಸಿನಲ್ಲೇ ಜೀವನ ನಡೆಸುತ್ತಿದ್ದರೂ, ಯಾರಿಗೂ ತಮ್ಮ ಕಷ್ಟ ಹೇಳಿಕೊಳ್ಳುತ್ತಿರಲಿಲ್ಲ.

ಒಂದು ದಿನ ನಮ್ಮ ಸಂಪಾದಕರಾಗಿದ್ದ ಎಸ್.ಕೆ. ರಾಮಣ್ಣನವರ ಹತ್ಯೆಯಾಯಿತು. ಪತ್ರಿಕೆಯ ಜವಾಬ್ದಾರಿಯನ್ನು ರಾಮಣ್ಣ ಅವರ ಸೋದರ ಶಂಕರೇಗೌಡರು ವಹಿಸಿಕೊಂಡರು. ಸ್ವಲ್ಪ ದಿನ ಕೆಲಸ ಮಾಡುವಷ್ಟರಲ್ಲಿ ನಾವೆಲ್ಲ ಉದ್ಯೋಗ ಅರಸಿ ದೂರವಾಗಬೇಕಾಯಿತು. ಅಷ್ಟರಲ್ಲಿ ಹರೀಶ್ ಅವರ ವಿವಾಹವೂ ಆಯಿತು. ಕೆಲವೇ ದಿನಗಳಲ್ಲಿ ರವಿ ತಂದೆಯೂ ತೀರಿಕೊಂಡರು. ಅವರು ಸರ್ಕಾರಿ ಹುದ್ದೆಯಲ್ಲಿದ್ದುದರಿಂದ ತಂದೆಯ ಕೆಲಸ ರವಿಗೆ ಸಿಕ್ಕಿತು. ಈಗ ಆತ ಹುಣಸೂರಿನಲ್ಲಿದ್ದಾನೆ.

ನಾನು ಬೆಂಗಳೂರಿನತ್ತ ಬಂದೆ. ಹರೀಶ್ ಮಂಡ್ಯದಲ್ಲೇ ಒಂದು ಕಂಪ್ಯೂಟರ್ ಅಂಗಡಿಗೆ ಸೇರಿಕೊಂಡರು. ಬೆಳಗ್ಗೆ ಹೋಗಿ ರಾತ್ರಿ ಮನೆಗೆ ಬರುತ್ತಿದ್ದ ಅವರಿಗೆ ಮೊದಲು 3000, ಈಗ 4000 ರು. ಸಂಬಳ ಸಿಗುತ್ತಿದೆ. ಅಷ್ಟರಲ್ಲೇ ಅವರು ಜೀವನ ಸಾಗಿಸುತ್ತಿದ್ದಾರೆ.

ಅವರ ಸಂಬಂಧಿಕರ ಹುಡುಗರು ದುಬೈನಲ್ಲಿದ್ದಾರೆ. ಅವರು ಹರೀಶ್ ಅವರಿಗೆ ಅಲ್ಲಿ ಕೆಲಸ ನೋಡಿದ್ದಾರೆ. ಪಾಸ್ ಪೋರ್ಟ್ ಸಹ ಆಗಿದೆ. ಬೇರೆ ಕೆಲಸಕ್ಕೆ ಹೋಗುತ್ತಿರುವುದಾಗಿ ಹೇಳಿದರೆ ಇಷ್ಟು ವರ್ಷ ಕೆಲಸ ಕೊಟ್ಟಿದ್ದ ಅಂಗಡಿ ಮಾಲೀಕರಿಗೆ ಕೈಕೊಟ್ಟಂತಾಗುವುದಿಲ್ಲವೇ ಎಂಬ ಪ್ರಶ್ನೆಯನ್ನು ಮುಗ್ಧತನದಿಂದ ಕೇಳುತ್ತಿದ್ದಾರೆ ಹರೀಶ್. ಹರೀಶ್ ಅವರಿಗೆ ಹಲವು ಮಂದಿ ಪರಿಚಯ ಇದ್ದಾರೆ. ಅದನ್ನು ಬಳಸಿ ಮಂಡ್ಯದಲ್ಲೇ ಒಂದು ಕಂಪ್ಯೂಟರ್ ಅಂಗಡಿ ಹಾಕಿಕೊಳ್ಳಿ ಎಂದು ಸ್ನೇಹಿತರೆಲ್ಲಾ ಕೇಳಿಕೊಂಡೆವು. ಆದರೆ ಅವರು ಕೇಳಲಿಲ್ಲ. ನನಗೆ ಕೆಲಸ ಕೊಟ್ಟವರಿಗೆ ಪ್ರತಿಸ್ಪರ್ಥಿಯಾಗಲು ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳಿದರು.

ಈಗ ದುಬೈಗೆ ಹೋಗಲು ಅವರಿಗೆ ಕಾಡುತ್ತಿರುವ ಮತ್ತೊಂದು ಕೊರಗು- ಎರಡು ಪುಟ್ಟ ಮಕ್ಕಳಿರುವ ಕುಟುಂಬ ಬಿಟ್ಟು ಹೋಗಬೇಕಲ್ಲ ಎಂಬುದು.

ಕಳೆದ ವಾರ ಮಂಡ್ಯಕ್ಕೆ ಹೋಗಿದ್ದಾಗ ಹರೀಶ್ ಅವರ ಕೊರಗು ಕೇಳಿ ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಮುಂದಿನ ಸಾರಿ ಹೋದಾಗ ಅವರು ಏನು ನಿರ್ಧಾರ ಕೈಗೊಂಡಿದ್ದಾರೆ ಎಂಬುದನ್ನು ಮರೆಯದೇ ಕೇಳಬೇಕು ಅಂದುಕೊಂಡಿದ್ದೇನೆ.

YIELDನಿಂದ ಹೆಚ್ಚಿನ YIELD

ಕೆಲ ತಿಂಗಳ ಹಿಂದೆ ಬೆಂಗಳೂರಿನ ರಾಜಾಜಿನಗರ ಕಡೆಯಿಂದ ಬಿಎಂಟಿಸಿ ಬಸ್ ನಲ್ಲಿ ಶಿವಾಜಿನಗರಕ್ಕೆ ಬರುವುದೆಂದರೆ ಯಮಯಾತನೆ. ಅರ್ಧಗಂಟೆಯಲ್ಲಿ ಶಿವಾಜಿನಗರಕ್ಕೆ ಬರುತ್ತೇನೆ ಎಂದು ಸ್ನೇಹಿತನಿಗೆ ಹೇಳಿ ರಾಜಾಜಿನಗರದ ನವರಂಗ್ ಬಳಿ ಬಸ್ ಹತ್ತಿದರೆ ಶಿವಾಜಿನಗರಕ್ಕೆ ಬರುವಷ್ಟರಲ್ಲಿ ಒಂದೂವರೆ ಗಂಟೆಯೇ ಆಗುತ್ತಿತ್ತು. ಸಂಜೆ ಹೊತ್ತಂತೂ ಬಸ್ ಗಳು ತುಂಬಿ ತುಳುಕುತ್ತಿರುತ್ತವೆ. ಬಸ್ಸಲ್ಲಿ ಸೀಟು ಹಿಡಿದರೆ ಯಾವುದೋ ಸಾಮ್ರಾಜ್ಯವನ್ನೇ ಗೆದ್ದಂತ ಅನುಭವ. ಸೀಟು ಸಿಗದೆ ನಿಂತುಕೊಂಡು ಪ್ರಯಾಣಿಸಿದರಂತೂ ಮುಗಿಯಿತು ಕತೆ. ಒಂದೂವರೆ ಗಂಟೆ ಉಸಿರಾಡಲೂ ಹೆಣಗಾಡುತ್ತಾ, ಪಕ್ಕದಲ್ಲಿ ನಿಂತವರ ಮೇಲೆ ಬೀಳುತ್ತಾ ಬರಬೇಕಿತ್ತು.

ಆದರೆ, ಈಗ ಹಾಗಾಗುತ್ತಿಲ್ಲ. ಅದಕ್ಕೆ ಕಾರಣ ಎರಡು.

1. ಬಾಲಬ್ರೂಯಿ ಅತಿಥಿಗೃಹದ ಬಳಿ ಸಂಚಾರಿ ಪೊಲೀಸರು ಸಿಗ್ನಲ್ ತೆಗೆದಿದ್ದಾರೆ. YIELD ಎಂಬ ಫಲಕ ಹಾಕಿದ್ದಾರೆ. ಫಲಕ ಹಾಕಿದಾಕ್ಷಣ ಸಂಚಾರ ನಿಯಂತ್ರಣಕ್ಕೆ ಬರುವುದಿಲ್ಲ. ಬೇಕಿದ್ದರೆ ನಿಧಾನವಾಗಿ ಚಲಿಸಿ ಎಂಬ ಬೋರ್ಡ್ ಹಾಕಿರುವ ಕಡೆ ನೋಡಿ- ಬಹುತೇಕ ಮಂದಿ ವೇಗವಾಗಿಯೇ ಹೋಗುತ್ತಿರುತ್ತಾರೆ. ಆದರೆ ಇಲ್ಲಿ ಹಾಗಾಗಿಲ್ಲ. ನಮ್ಮ ರಾಜ್ಯದ ಮಟ್ಟಿಗೆ ಇದೊಂದು ಹೊಸ ಐಡಿಯಾ. ಮಾಮೂಲಿ ಸಿಗ್ನಲ್ ಗೂ ಈ ವ್ಯವಸ್ಥೆಗೂ ಭಾರಿ ವ್ಯತ್ಯಾಸವಿದೆ. YIELDನ ಏಕಮೇವ ಉದ್ದೇಶ- ಬೇಗ ಬಂದವರಿಗೆ ದಾರಿ. ತುಸು ಲೇಟಾಗಿ ಬಂದವರು ಸ್ವಲ್ಪ ಕಾಯಬೇಕು. ಅಮೆರಿಕ, ಕೆನಡಾ, ಬ್ರಿಟನ್ ನ ಹಲವು ರಾಷ್ಟ್ರಗಳಲ್ಲಿ ಈ ವ್ಯವಸ್ಥೆ ಹಿಟ್ ಆಗಿದೆ. ಬಾಲಬ್ರೂಯಿ ಅತಿಥಿಗೃಹದ ಬಳಿ ಜಾರಿಗೆ ತಂದಿರುವ YIELD ವ್ಯವಸ್ಥೆಯೂ ಯಶಸ್ವಿಯಾಗಿದೆ. ಬಸವೇಶ್ವರ ವೃತ್ತದ ಸಿಗ್ನಲ್ ದಾಟಿ ಬಂದ ಬಳಿಕವೂ ಕೆಲ ನಿಮಿಷ ಬಾಲಬ್ರೂಯಿ ಸಿಗ್ನಲ್ ನಲ್ಲಿ ವಾಹನಗಳು ನಿಲ್ಲಬೇಕಾದ ಪರಿಸ್ಥಿತಿ ಕೆಲ ತಿಂಗಳ ಹಿಂದೆ ಇತ್ತು. ಈಗ ಅದು ತಪ್ಪಿದೆ. ಬಸವೇಶ್ವರ ಸಿಗ್ನಲ್ ದಾಟಿದ ಬಳಿಕ ವೃತ್ತಾಕಾರದಲ್ಲಿ ಸುತ್ತಿ ವಾಹನಗಳು ಮುಂದೆ ಹೋಗುತ್ತಿವೆ. ಬಸವೇಶ್ವರ ವೃತ್ತದಿಂದ ಹೋಗುವ ವಾಹನಗಳು ಬೇಗ ಹೋದರೆ ಬೇಗ ರಸ್ತೆ ದಾಟಬಹುದು. ಇಲ್ಲ ತುಸು ಹೊತ್ತು ಕಾದು, ವಿಮಾನ ನಿಲ್ದಾಣ ರಸ್ತೆಯಿಂದ ಬರುವ ವಾಹನಗಳು ಹೋದ ನಂತರ ಚಲಿಸಬೇಕು. ಹೀಗಾಗಿ ವಾಹನಗಳು ಇಲ್ಲದಿದ್ದರೂ ಸಿಗ್ನಲ್ ಕೆಂಪು ಬಣಕ್ಕೆ ತಿರುಗುವವರೆಗೂ ಕಾಯುತ್ತಾ ನಿಲ್ಲುವುದು ತಪ್ಪುತ್ತದೆ.

2. ರೇಸ್ ಕೋರ್ಸ್ ರಸ್ತೆ ಅಗಲಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಹೀಗಾಗಿ ಈ ಹಿಂದಿನಂತೆ ಇಲ್ಲಿ ಹೆಚ್ಚು ಹೊತ್ತು ನಿಲ್ಲಬೇಕಿಲ್ಲ. ಬೇಗನೆ ಮುಂದೆ ಹೋಗಬಹುದು. ಈ ರಸ್ತೆ ಕಾಮಗಾರಿಯೂ ಮುಗಿದರೆ ಶಿವಾಜಿ ನಗರಕ್ಕೆ ಬರುವುದು ಸಲೀಸು. ಆದರೆ ವಸಂತನಗರ ಬಳಸಿ ಬರಬೇಕಲ್ಲ ಎಂಬುದೇ ಬೇಜಾರು.



Friday, December 5, 2008

ನಮ್ಮಲ್ಲಿ ಮಾತ್ರ ಹೀಗೆ...

''ಇದು ಹೇಡಿಗಳ ಕೃತ್ಯ. ದೇಶದ ಕೋಮು ಸಾಮರಸ್ಯ ಹಾಳು ಮಾಡುವ ಯತ್ನ" n

ದೇಶದಲ್ಲಿ ಪ್ರತಿ ಬಾರಿ ಸ್ಫೋಟ ಸಂಭವಿಸಿದಾಗಲೂ ಇಂಥ ರೆಡಿಮೇಡ್ ಡೈಲಾಗ್ ಹೇಳುತ್ತಿದ್ದವರು ಮನೆ ಸೇರಿ ನಾಲ್ಕಾರು ದಿನಗಳಾಗಿವೆ. ಈ ಬದಲಾವಣೆಯಿಂದ ದೇಶದಲ್ಲಿ ಉಗ್ರವಾದ ನಿಂತು ಹೋಗುತ್ತಾ?

ಅಂಥ ಸಾಧ್ಯತೆ ಕಾಣುತ್ತಿಲ್ಲ. ಚಿದಂಬರಂ ಬರಲಿ, ಹೋಗಲಿ ಉಗ್ರರು ತಮ್ಮ ಅಟ್ಟಹಾಸವನ್ನೇ ಮೆರೆದೇ ಮೆರೆಯುತ್ತಾರೆ. ಅದು ದೇಶದ ಜನರಿಗೂ ಗೊತ್ತಿದೆ. ಒಂದು ವೇಳೆ ಭಾರತದಲ್ಲಿ ನಡೆದಷ್ಟು ಘಟನೆಗಳು ಅಮೆರಿಕದಲ್ಲಿ ನಡೆದಿದ್ದರೆ ಇಷ್ಟೊತ್ತಿಗೆ ಲಷ್ಕರ್, ಇಂಡಿಯನ್ ಮುಜಾಹಿದೀನ್ ನಂತಹ ಉಗ್ರ ಸಂಘಟನೆಗಳ ಒಬ್ಬ ಕಾರ್ಯಕರ್ತನೂ ಉಳಿಯುತ್ತಿರಲಿಲ್ಲವೇನೋ? ಒಮ್ಮೆ ನೆನಪಿಸಿಕೊಳ್ಳಿ 2001ರ ಸೆ.11ರಂದು ಲಾಡೆನ್ ನೇತೃತ್ವದ ಅಲ್ ಖೈದಾ ಉಗ್ರರು ವಿಶ್ವ ವಾಣಿಜ್ಯ ಗೋಪುರವನ್ನು ಹೊಡೆದು ಉರುಳಿಸಿದರು. ಆನಂತರ ಅಮೆರಿಕ ಅಲ್ ಖೈದಾ ವಿರುದ್ಧ ಸಮರವನ್ನೇ ಸಾರಿತು. ಯಶಸ್ಸು ಕಾಣಲಿಲ್ಲ ಎಂಬುದು ಬೇರೆ ವಿಷಯವಾದರೂ, ಆ ದೇಶದಲ್ಲಿ ಇಲ್ಲಿವರೆಗೂ ಯಾವುದಾದರೂ ಬಹುದೊಡ್ಡ ಉಗ್ರ ದಾಳಿ ನಡೆದಿದೆಯಾ?

1. ದೇಶದಲ್ಲಿ ಬಾಂಬ್ ಸಿಡಿಸಿ ಅಮಾಯಕರನ್ನು ಕೊಂದವರು, ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದವರ ಮೇಲೆ ಮನಸೋಇಚ್ಛೆ ಗುಂಡು ಹಾರಿಸಿ ಬಲಿತೆಗೆದುಕೊಂಡವರು ಯಾವ ರಾಷ್ಟ್ರದವನು ಎಂಬುದು ಇಡೀ ದೇಶಕ್ಕೇ ಗೊತ್ತಿದೆ. ಆದರೆ ನಮ್ಮ ಸರ್ಕಾರ ಕ್ರಮ ಕೈಗೊಳ್ಳುವುದಿಲ್ಲ.

2. ದೇಶದ ಮೇಲೆ ದಂಡೆತ್ತಿ ಬಂದ ಭಯೋತ್ಪಾದಕರನ್ನು ಎಲ್ಲಿ ಸೃಷ್ಟಿಸಲಾಗುತ್ತಿದೆ, ಅವರಿಗೆ ಎಲ್ಲಿ ತರಬೇತಿ ನೀಡಲಾಗುತ್ತಿದೆ ಎಂಬ ಎಲ್ಲಾ ವಿವರವೂ ಗೊತ್ತಿದೆ. ಆದರೂ ನಮ್ಮ ದೇಶ ಏನೂ ಮಾಡುವುದಿಲ್ಲ.

ಇಂಥ ಘಟನೆ ನಡೆಯಲು ಭಾರತವಲ್ಲದೆ ಮತ್ಯಾವ ರಾಷ್ಟ್ರದಲ್ಲಿ ಸಾಧ್ಯ ಹೇಳಿ.

ನಮ್ಮ ದೇಶವನ್ನಾಳುವ ಯಾವ ರಾಜಕಾರಣಿಯೂ ಭಯೋತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅದಕ್ಕೆ ಕಾರಣ ವೋಟ್ ಬ್ಯಾಂಕ್ ರಾಜಕಾರಣ. ಶಿವರಾಜ್ ಪಾಟೀಲ್ ಹೋದಾಕ್ಷಣ ಎಲ್ಲವೂ ಸರಿ ಹೋಗುತ್ತೆ ಅಂಥ ಭಾವಿಸಿದರೆ ಅದು ನಮ್ಮ ತಪ್ಪು. ಚಿದಂಬರಂ ಅವರೂ ಕಾಂಗ್ರೆಸ್ಸಿಗರೇ. ಸೋನಿಯಾ ಹೇಳಿದಂತೆ ಅವರೂ ಕುಣಿಯಲೇಬೇಕು. ಆದರೆ, ಶಿವರಾಜ್ ಪಾಟೀಲ್ ರಷ್ಟಲ್ಲ ಅನ್ನುವುದೇ ಸಮಾಧಾನ.

ಕಾಂಗ್ರೆಸ್ ನವರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾರೆ. ಸರಿ. ಮೊನ್ನೆ ಮುಂಬೈ ಮೇಲೆ ಉಗ್ರರು ದಾಳಿ ಮಾಡಿದಾಗ ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷರು ಹೇಳಿದರು- ಈ ಸಂದರ್ಭದಲ್ಲಿ ಸರ್ಕಾರವನ್ನು ನಾವು ಟೀಕಿಸಲು ಹೋಗುವುದಿಲ್ಲ. ಆದರೆ, ದಿಲ್ಲಿಯ ಪತ್ರಿಕೆಗಳಲ್ಲಿ ಹಾಗೆ ಹೇಳಿದ ಮರುದಿನವೇ ಮುಖಪುಟದಲ್ಲೇ ಕಾಲು ಪುಟದಷ್ಟು ಜಾಹೀರಾತಿತ್ತು: ಭಯೋತ್ಪಾದಕರು ಮತ್ತೆ ಬಂದಿದ್ದಾರೆ. ನಮ್ಮದು ಬಲಹೀನ ಸರ್ಕಾರ, ಬಿಜೆಪಿಗೆ ಮತ ನೀಡಿ...

ಇದನ್ನು ಏನನ್ನಬೇಕು.

Monday, November 10, 2008

ಪಾರ್ಟಿಸನ್ ಎಂಬ ಮೋಡಿ ಮಾಡಿದ ಚಿತ್ರ...

ಶನಿವಾರ ಮಧ್ಯಾಹ್ನ 3 ಗಂಟೆ. ಟೀವಿ ಮುಂದೆ ಕುಳಿತು ಚಾನೆಲ್ ಸ್ಕ್ಯಾನ್ ಮಾಡುತ್ತಿದ್ದೆ. ಸ್ಟಾರ್ ಮೂವೀಸ್ ಚಾನೆಲ್ ನಲ್ಲಿ ಸಿಖ್ ಟೊಪ್ಪಿಗೆ ತೊಟ್ಟ ವ್ಯಕ್ತಿ ಕಾಣಿಸಿಕೊಂಡ. ಯಾವುದೋ ಭಾರತೀಯ ಚಿತ್ರವಿರಬೇಕು ಎಂದು ನೋಡುತ್ತಾ ಕುಳಿತೆ. ಸಂಜೆ 5 ಗಂಟೆಗೆ ಆ ಚಿತ್ರ ಮುಗಿದಾಗ ಕಣ್ಣು ಒದ್ದೆಯಾಗಿತ್ತು. ಆ ಚಿತ್ರ ನನ್ನ ಮನಸ್ಸಿನ ಮೇಲೆ ಅಷ್ಟೊಂದು ಪ್ರಭಾವ ಬೀರಿತ್ತು.

ಅದು- ಪಾರ್ಟಿಷನ್. 1947ರಲ್ಲಿ ಭಾರತ- ಪಾಕಿಸ್ತಾನ ಒಡೆದಾಗ ನಡೆದ ಘಟನಾವಳಿಗಳನ್ನು ಬಿಂಬಿಸುವ ಚಿತ್ರ. ಪಂಜಾಬ್ ನಲ್ಲಿ ಎಲ್ಲೆಂದರಲ್ಲಿ ಮುಸ್ಲಿಮರನ್ನು ಕೊಲ್ಲುತ್ತಿದ್ದಾಗ ಸಾಯಬೇಕಿದ್ದ ಮುಸ್ಲಿಂ ಯುವತಿಯನ್ನು ರಕ್ಷಿಸಿ ಆಕೆಗೆ ಜೀವನ ಕೊಟ್ಟು, ತನ್ನ ಜೀವನವನ್ನೇ ಕಳೆದುಕೊಳ್ಳುವ ನಿವೃತ್ತ ಸಿಖ್ ಯೋಧನೊಬ್ಬನ ಕತೆ.
ಆ ಚಿತ್ರ 2.50ಕ್ಕೆ ಆರಂಭವಾಗಿತ್ತು. ಹಾಗಾಗಿ ನಾನು ನೋಡುವ ಹೊತ್ತಿಗೆ ಹಲವು ದೃಶ್ಯಗಳು ಸರಿದು ಹೋಗಿದ್ದವು.


ಕತೆ ಹೀಗಿದೆ.
ಭಾರತ- ಪಾಕ್ ಇಬ್ಭಾಗವಾದಾಗ ಹಿಂದು- ಮುಸ್ಲಿಂ ಘರ್ಷಣೆ ಶುರುವಾಗುತ್ತದೆ. ಮುಸ್ಲಿಮರ ಗುಂಪೊಂದು ಭಾರತದಿಂದ ಪಾಕ್ ನತ್ತ ಗಂಟು ಮೂಟೆ ಕಟ್ಟಿಕೊಂಡು ಹೋಗುತ್ತಿರುತ್ತದೆ. ಆಗ ಪಂಜಾಬ್ ನ ಸಿಖ್ಖರು ಕುದುರೆಯ ಮೇಲೆ ಬಂದು ಆ ಗುಂಪಿನ ಮೇಲೆ ದಾಳಿ ಮಾಡುತ್ತಾರೆ. ಹಲವರನ್ನು ಇರಿದು ಕೊಲ್ಲುತ್ತಾರೆ. 17 ವರ್ಷದ ಬಾಲಕಿಯನ್ನು ಕುದುರೆ ಮೇಲಿದ್ದ ಸಿಖ್ ವ್ಯಕ್ತಿಯೊಬ್ಬ ಅಟ್ಟಾಡಿಸುತ್ತಾನೆ. ಆ ಬಾಲಕಿ ನಸೀಮ್. ಆಕೆ ತಪ್ಪಿಸಿಕೊಳ್ಳುತ್ತಾಳೆ. ನಸೀಮ್ ಳನ್ನು ಬಚಾವ್ ಮಾಡಲು ಆಕೆ ಅಣ್ಣ ಅಕ್ಬರ್ ಬರುತ್ತಾನೆ. ಸಿಖ್ ಆತನಿಗೆ ಇರಿಯಲು ಮುಂದಾಗುತ್ತಾನೆ. ನಸೀಮ್ ತಂದೆ ಅಡ್ಡ ಬಂದು ಪ್ರಾಣ ಕಳೆದುಕೊಳ್ಳುತ್ತಾನೆ.
ನಸೀಮ್ ಗೆ ತಂದೆ ಸತ್ತಿದ್ದು ಗೊತ್ತಿರುವುದಿಲ್ಲ. ಹೆದರುತ್ತಾ ಓಡುವ ಆಕೆ ದೂರ ಹೋಗಿ ಮರಗಳ ಮಧ್ಯೆ ಅವಿತು ಕುಳಿತುಬಿಡುತ್ತಾಳೆ.
ಹೆಣಗಳು ಬಿದ್ದ ಬಳಿಕ ಆ ಸ್ಥಳ ಪ್ರಶಾಂತವಾಗುತ್ತದೆ. ನಸೀಮ್ ಕುಟುಂಬದವರು ಪಾಕ್ ಗೆ ಹೋಗುತ್ತಾರೆ.
ಗಲಭೆ ತಣ್ಣಗಾಗಿರುವುದಿಲ್ಲ. ಸಿಖ್ಖರು ಮುಸ್ಲಿಮರಿಗಾಗಿ ಹುಡುಕಾಡುತ್ತಿರುತ್ತಾರೆ. ಅಂಥ ಸಂದರ್ಭದಲ್ಲಿ ಗಿಯಾನ್ ಎಂಬಾತನ ಕಣ್ಣಿಗೆ ನಸೀಮ್ ಬೀಳುತ್ತಾಳೆ. ಈತ ಸಿಖ್ ಎಂದು ತಿಳಿದ ಕೂಡಲೇ ನಸೀಮ್ ಹೆದರಿ ಕಂಗಾಲಾಗುತ್ತಾಳೆ. ಆಕೆಗೆ ಧೈರ್ಯ ತುಂಬುವ ಗಿಯಾನ್, ಆಕೆಯ ತಲೆಗೆ ಸಿಖ್ಖರಂತೆ ಟೊಪ್ಪಿಗೆ ಕಟ್ಟಿ ಮನೆಗೆ ಕರೆದು ತರುತ್ತಾನೆ.
ಪೇಟೆಗೆ ಬಂದಾಗ ಮುಸ್ಲಿಮರ ಹತ್ಯೆಯಲ್ಲಿ ನಿರತವಾಗಿರುವ ಗುಂಪು ಗಿಯಾನ್ ಗೆ ಎದುರಾಗುತ್ತಾದೆ. ಬಾ ನೋಡು ಬಾ... ಪಾಕಿಸ್ತಾನದಿಂದ ರೈಲು ಬಂದಿದೆ... ಎಂದು ಕರೆದೊಯ್ಯುತ್ತಾರೆ. ಗಿಯಾನ್ ಹೋಗುತ್ತಾನೆ. ಸಿಖ್ಖರ ಶವಗಳು ರೈಲಿನ ಮೇಲೆ ಕೆಳಗೆ ಎಲ್ಲ ಕಡೆ ನೇತಾಡುತ್ತಿರುತ್ತವೆ. ಪಾಕೀಯರು ಸೇಡಿ ತೀರಿಸಿಕೊಂಡಿರುತ್ತಾರೆ.
ಸಿಖ್ ಬಂಡುಕೋರರು ಗಿಯಾನ್ ಗೆ ಹೇಳುತ್ತಾರೆ: ನಾವೂ ಸೇಡು ತೀರಿಸಿಕೊಳ್ಳಲು ನಮಗೆ ಜನ ಬೇಕು. ಬಾ ನಮ್ಮ ಜತೆ ಸೇರು ಎನ್ನುತ್ತಾರೆ.
ಗಿಯಾನ್ ಒಪ್ಪುವುದಿಲ್ಲ.
ಕೆಲವೇ ದಿನಗಳಲ್ಲಿ ಗಿಯಾನ್ ತನ್ನ ಮನೆಯಲ್ಲಿ ನಸೀಮ್ ಳನ್ನು ಇಟ್ಟುಕೊಂಡಿರುವುದು ಸಿಖ್ಖರಿಗೆ ಗೊತ್ತಾಗಿಬಿಡುತ್ತದೆ. ಆಕೆಯನ್ನು ಕೊಲ್ಲಲು ಸಿಖ್ಖರು ಬರುತ್ತಾರೆ. ಆದರೆ ಗಿಯಾನ್ ಹಣ ಕೊಟ್ಟು ಅವರ ಮನವೊಲಿಸಿ ಕಳುಹಿಸುತ್ತಾನೆ.
ಹೀಗೆ ಚಿತ್ರ ಮುಂದುವರಿಯುತ್ತದೆ.
ನಸೀಮ್ ಳನ್ನು ಗಿಯಾನ್ ವಿವಾಹವಾಗುತ್ತಾನೆ. ಅವರಿಗೆ ಒಂದು ಮಗುವೂ ಆಗುತ್ತದೆ.
ನಸೀಮ್ ಗೆ ತನ್ನ ತಾಯಿ- ತಂದೆ ನೋಡಬೇಕೆಂಬ ಉತ್ಕಟ ಬಯಕೆ. ಅದಕ್ಕೂ ವ್ಯವಸ್ಥೆ ಮಾಡುತ್ತಾನೆ ಗಿಯಾನ್. ಆಕೆಯನ್ನು ತಿಂಗಳ ಮಟ್ಟಿಗೆ ಪಾಕ್ ಗೆ ಕಳುಹಿಸಿ ಮಗುವಿನೊಂದಿಗೆ ಆಕೆಯ ಬರುವಿಕೆಗಾಗಿ ಕಾಯುತ್ತಿರುತ್ತಾನೆ.
ಆದರೆ, ಆಕೆ ಬರುವುದಿಲ್ಲ. ಭಾರತದಲ್ಲಿ ನಸೀಮ್ ಸಿಖ್ ವ್ಯಕ್ತಿಯನ್ನು ವರಿಸಿರುವ ವಿಷಯ ಗೊತ್ತಾಗುತ್ತಿದಂತೆ ನಸೀಮ್ ಅಣ್ಣ ಅಕ್ಬರ್, ತಾಯಿಗೆ ಕೋಪ ಬಂದುಬಿಡುತ್ತದೆ. ನಿನ್ನ ತಂದೆ ಕೊಂದ ಜನಾಂಗದ ವ್ಯಕ್ತಿಯನ್ನು ವಿವಾಹವಾಗುತ್ತೀಯಾ? ಎಂದು ಹೇಳಿ ಆಕೆಯನ್ನು ಮನೆಯಿಂದ ಹೊರಗೇ ಬಿಡುವುದಿಲ್ಲ.
ಇತ್ತ ಭಾರತದಲ್ಲಿ ಕಾದು ಕಾದು ಸಾಕಾದ ಗಿಯಾನ್ ಪಾಕ್ ಗೆ ಹೋಗಲು ರೆಡಿಯಾಗುತ್ತಾನೆ. ಆದರೆ ಮುಸ್ಲಿಮರಲ್ಲದೆ ಬೇರೆಯವರನ್ನು ಪಾಕ್ ಗೆ ಬಿಡುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಗಿಯಾನ್ ಮುಸ್ಲಿಂ ಆಗಿ ಮತಾಂತರಗೊಳ್ಳುತ್ತಾನೆ!

ಪಾಕ್ ಗೆ ಹೋಗಿ ನಸೀಮ್ ಮನೆ ಪತ್ತೆ ಹಚ್ಚುತ್ತಾನೆ. ಆದರೆ ಅಕ್ಬರ್ ಈತನನ್ನು ನೋಡಿದ ಕೂಡಲೇ ಥಳಿಸುತ್ತಾನೆ. ಗಿಯಾನ್ ನ ಆಂಗ್ಲ ಸ್ನೇಹಿತರು ಆತನ ಮನವೊಲಿಸಿ ಭಾರತಕ್ಕೆ ವಾಪಸ್ ಕರೆತರಲು ನಿರ್ಧರಿಸುತ್ತಾರೆ. ಲಾಹೋರ್ ರೈಲು ನಿಲ್ದಾಣಕ್ಕೆ ಬರುತ್ತಾರೆ.
ಅಷ್ಟರಲ್ಲಿ ಮಗಳ ಯಾತನೆ ಸಹಿಸದ ನಸೀಮ್ ತಾಯಿ ಭಾರತಕ್ಕೆ ಹೋಗುವಂತೆ ನಸೀಮ್ ಗೆ ಸೂಚಿಸುತ್ತಾಳೆ. ನಸೀಮ್ ಲಾಹೋರ್ ನಿಲ್ದಾಣಕ್ಕೆ ಬರುತ್ತಾಳೆ. ಗಿಯಾನ್ ಸಂತಸಪಡುತ್ತಾನೆ.
ಇಬ್ಬರೂ ಅಪ್ಪಿಕೊಂಡು ಮೇಲ್ಸೆತುವೆ ಮೇಲೆ ನಿಂತಿರುತ್ತಾರೆ. ಅಷ್ಟರಲ್ಲಿ ಅಕ್ಬರ್ ಓಡಿ ಬರುತ್ತಾನೆ. ಗಿಯಾನ್ ಅವನನ್ನು ತಡೆಯಲು ಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ತಳ್ಳಾಟವಾಗುತ್ತದೆ. ಅಷ್ಟರಲ್ಲಿ ರೈಲು ಚಲಿಸಲು ಆರಂಭಿಸಿರುತ್ತದೆ. ಆ ನೂಕಾಟದಲ್ಲಿ ಗಿಯಾನ್ ಮೇಲಿನಿಂದ ಹಳಿಯ ಮೇಲೆ ಬೀಳುತ್ತಾನೆ. ಕ್ಷಣಾರ್ಧದಲ್ಲಿ ಸತ್ತೇ ಹೋಗುತ್ತಾನೆ.

ಬಾಲಕಿಯ ಜೀವ ಕಾಪಾಡಿ, ಜೀವನ ಕೊಟ್ಟ, ಆಕೆಯೊಂದಿಗೆ ಇರಲು ಇಸ್ಲಾಂಗೂ ಮತಾಂತರಗೊಳ್ಳುವ ಗಿಯಾನ್ ಎಂಬ ದೇಶರಕ್ಷಕನ ಜೀವ ಈ ರೀತಿ ಅಂತ್ಯಗೊಳ್ಳುತ್ತದೆ.


Wednesday, November 5, 2008

ಮಾಣಿಕ್ಯ ಧಾರಾ ಬಗ್ಗೆ...

ಕನ್ನಡಪ್ರಭ ದಲ್ಲಿ ನವೆಂಬರ್ ೨ರ೦ದು ಪ್ರಕಟ ಆಗಿದೆ.

Friday, October 31, 2008

ಹಳಿಗಳ ಮೇಲೆ ಹಳಿ ತಪ್ಪಿದ ಬದುಕು




ಕನ್ನಡಪ್ರಭದ ಸಖಿ ಪುರವಣಿಯಲ್ಲಿ ಪ್ರಕಟವಾದ ದಿನಾಂಕ: ೨೫-೧೦-೨೦೦೮



Monday, October 20, 2008

ಪ್ರೇಮ ಲೀಲೆ...




ಆಕೆ ಶೋಭಾ. ನಗುಮೊಗದ ಸುಂದರಿ. ಮೌನವೇ ಆಕೆಯ ಆಭರಣ. ಮಂಡ್ಯ ಪಕ್ಕದ ಹಳ್ಳಿಯಿಂದ ಮಹಿಳಾ ಕಾಲೇಜಿಗೆ ಪದವಿ ಓದಲು ಬರುತ್ತಿದ್ದಳು. ಆಕೆಯ ಮೇಲೆ ಕುಮಾರ ಎಂಬ ಯುವಕನಿಗೆ ಪ್ರೇಮ ಬೆಳೆಯಿತು. ಇಬ್ಬರೂ ಒಂದೇ ಊರಿನವರಾದ್ದರಿಂದ ಆಕೆಯ ಬರುತ್ತಿದ್ದ ಬಸ್ ಗೇ ಕುಮಾರನೂ ಮಂಡ್ಯಕ್ಕೆ ಬರುತ್ತಿದ್ದ. ಆಕೆಯನ್ನೇ ಹಿಂಬಾಲಿಸುತ್ತಿದ್ದ.
ಶೋಭಾಗೆ ಇದು ಇಷ್ಟವಿರಲಿಲ್ಲ. ಆದರೂ ಕರೆದು ಹೇಳುವ ಧೈರ್ಯ ಇರಲಿಲ್ಲ.
ಕುಮಾರ ಹಿಂದೆ ಸುತ್ತುವುದನ್ನು ಕಡಮೆ ಮಾಡಲಿಲ್ಲ. ತನ್ನ ಸ್ನೇಹಿತರ ಬಳಿಯೆಲ್ಲಾ ತಾನು ಪ್ರೇಮಿಸುತ್ತಿರುವ ವಿಷಯ ಹೇಳಿಕೊಂಡ. ಆತನದ್ದು ನಿಷ್ಕಲ್ಮಶ ಪ್ರೇಮ ಎಂಬುದು ಎಲ್ಲರಿಗೂ ಗೊತ್ತಿತ್ತು.
ಒಂದು ದಿನ ಧೈರ್ಯ ಮಾಡಿ ಶೋಭಾ ಬಳಿಗೆ ಹೋದ. 'ಐ ಲವ್ ಯೂ ಶೋಭಾ' ಅಂದ.
ಆಕೆ ಕೇಳಿಸಿಕೊಳ್ಳದಂತೆ ಹೋದಳು.
ಮತ್ತೆ ಮತ್ತೆ ಹಿಂಬಾಲಿಸತೊಡಗಿದ ಕುಮಾರ. ಪದೇಪದೇ ಶೋಭಾಳನ್ನು ಕೇಳತೊಡಗಿದ. ಆಕೆ ಕಡೆಗೂ ಒಂದು ದಿನ ಧೈರ್ಯ ಮಾಡಿ ಹೇಳಿಯೇಬಿಟ್ಟಳು: ನಂಗೆ ಇಷ್ಟ ಇಲ್ಲ.
ಕುಮಾರ ದುಃಖದಿಂದ ಆ ವಿಷಯವನ್ನು ಸ್ನೇಹಿತರ ಬಳಿಯೆಲ್ಲಾ ಹೇಳಿಕೊಂಡ. ಆಕೆಯನ್ನು ಬಿಟ್ಟುಬಿಡು ಎಂಬ ಸಲಹೆ ಬಹುತೇಕರಿಂದ ಬಂತು. ಆದರೆ, ಆತ ಕೇಳಲಿಲ್ಲ. ಮತ್ತೆ ಮತ್ತೆ ಶೋಭಾಳ ಹಿಂದೆ ಸುತ್ತತೊಡಗಿದ.
ಶೋಭಾ ಪದವಿ ಮುಗಿಯಿತು. ಕೆಲಸ ಹುಡುಕುತ್ತಿದ್ದಳು. ಅಷ್ಟರಲ್ಲಾಗಲೇ ಕುಮಾರ ಒಂದು ಅಂಗಡಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸಕ್ಕೆ ಸೇರಿದ್ದ. ಶೋಭಾಗೂ ಅದೇ ಅಂಗಡಿಯಲ್ಲಿ ಕೆಲಸ ಸಿಕ್ಕಿತು. ಶೋಭಾ ಕುಮಾರನ ಜತೆ ಅನಿವಾರ್ಯವಾಗಿ ಮಾತನಾಡಬೇಕಾಯಿತು. ಕುಮಾರ್ ತನ್ನ ಪ್ರೇಮ ನಿವೇದನೆ ಮಾಡಿಕೊಂಡ. ಕುಮಾರನದು ನಿಷ್ಕಲ್ಮಶ ಪ್ರೇಮ ಎಂಬುದು ಅರಿವಾದ ಬಳಿಕ ಆಕೆಯೂ ಒಪ್ಪಿದಳು.

ಕುಮಾರನ ಸ್ನೇಹಿತರು ಖುಷಿಪಟ್ಟರು. ಸದ್ಯ ಕುಮಾರನ ಪ್ರೇಮ ಕತೆ ಮುಗಿಯಿತು ಎಂದುಕೊಂಡು ನಿಟ್ಟುಸಿರುಬಿಟ್ಟರು.
ಆದರೆ... ಹೊಸದೊಂದು ಸಮಸ್ಯೆ ಶುರುವಾಯಿತು. ಶೋಭಾ- ಕುಮಾರ ಒಟ್ಟಾಗಿ ಓಡಾಡುತ್ತಿದ್ದ ವಿಷಯ ಶೋಭಾ ಮನೆಯವರಿಗೆ ಗೊತ್ತಾಯಿತು. ಕೆಲಸ ಬಿಡಿಸಿದರು. ಆಕೆ ಅಷ್ಟರಲ್ಲಾಗಲೇ ಕುಮಾರನನ್ನು ತೀವ್ರವಾಗಿ ಹಚ್ಚಿಕೊಂಡಿದ್ದಳು. ಇಬ್ಬರೂ ಊರಿನಲ್ಲೇ ಯಾರಿಗೂ ಕಾಣದ ಹಾಗೆ ಭೇಟಿ ಮಾಡುತ್ತಿದ್ದರು. ಶೋಭಾಗೆ ಮದುವೆ ಮಾಡಲು ಕುಟುಂಬದವರು ನಿಶ್ಚಯಿಸಿದರು. ಕುಮಾರನನ್ನು ಬಿಟ್ಟು ಯಾರನ್ನೂ ಮದುವೆಯಾಗುವುದಿಲ್ಲ ಅಂದುಬಿಟ್ಟಳು ಶೋಭಾ. ರಚ್ಚೆ ಹಿಡಿದು ಕುಳಿತಳು. ಇತ್ತ ಕುಮಾರ ಶೋಭಾ ಮನೆಯವರನ್ನು ಮನವೊಲಿಸಲು ತನಗೆ ಗೊತ್ತಿದ್ದವರನ್ನೆಲ್ಲಾ ರಾಯಭಾರಿಗಳನ್ನಾಗಿ ಕಳುಹಿಸುತ್ತಿದ್ದ. ಶೋಭಾ ವಿಷ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನೂ ಹಾಕಿದ್ದಳು. ಈ ಇಬ್ಬರ ಪ್ರೇಮ ಕಂಡ ಊರವರು ಎರಡೂ ಮನೆಯವರನ್ನೂ ಕರೆಸಿದರು. ಅಂದು ಶೋಭಾ ಮನೆಯಲ್ಲಿದ್ದಳು. ಕುಮಾರ ನ್ಯಾಯ ಪಂಚಾಯಿತಿಗೆ ಬಂದಿದ್ದ. ಮೊದಮೊದಲು ವಾಗ್ವಾದ ಆಯಿತು. ಮನೆಯಲ್ಲಿ ಕುಳಿತಿದ್ದ ಶೋಭಾಗೆ ಆ ವಾದಗಳು ತಲುಪಿದವು. ಇನ್ನು ಕುಮಾರ ಹಾಗೂ ನನ್ನ ಮದುವೆಯಾಗುವುದಿಲ್ಲ ಎಂದರಿತ ಆಕೆ ಆತ್ಮಹತ್ಯೆ ಮಾಡಿಕೊಂಡಳು.
ಆದರೆ, ಅಲ್ಲಿ ಎಡವಟ್ಟು ಆಗಿತ್ತು. ಸಭೆಯಲ್ಲಿ ಪ್ರತಿರೋಧ ತೋರಿದ್ದ ಶೋಭಾ ಮನೆಯವರು ಕಡೆಗೆ ಮದುವೆಗೆ ಸಮ್ಮತಿಸಿಬಿಟ್ಟರು. ಅವರು ಮನೆಗೆ ಬರುವಷ್ಟರಲ್ಲಿ ಶೋಭಾ ಹೆಣವಾಗಿದ್ದಳು. ಕುಮಾರನಿಗೆ ಇದನ್ನು ತಡೆಯಲು ಆಗಲಿಲ್ಲ. ಆತ ಶೋಭಾಳನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಆತನೂ ದುಡುಕಿನ ನಿರ್ಧಾರ ಕೈಗೊಳ್ಳುತ್ತಾನೆ ಎಂಬುದು ಊರವರಿಗೆ ಗೊತ್ತಾಗಿಹೋಗಿತ್ತು. ಎಲ್ಲರೂ ಕುಮಾರನಿಗೆ ಸಾಂತ್ವನ ಹೇಳಿದರು. ಶೋಭಾ ಮಡಿದು ಕೇವಲ ನಾಲ್ಕು ದಿವಸಗಳಾಗುವಷ್ಟರಲ್ಲಿ ಕುಮಾರ ವಿಷ ಸೇವಿಸಿ ಕಣ್ಣು ಮುಚ್ಚಿದ. ವಿಧಿಯ ವಿಚಿತ್ರವಂದರೆ ಕುಮಾರನ ತಮ್ಮ ಹೃದ್ರೋಗಿ. ಕುಮಾರ ಸತ್ತ ಎರಡು ವರ್ಷಗಳ ಬಳಿಕ ಆತನೂ ಮೃತಪಟ್ಟ. ಇವೆಲ್ಲವೂ ಆಗುವ ಮೊದಲೇ ಕುಮಾರ ತನ್ನ ತಂಗಿಯ ವಿವಾಹ ಮಾಡಿ ಮುಗಿಸಿದ್ದ. ಈಗ ಕುಮಾರನ ತಾಯಿ ಏಕಾಂಗಿ.
ಮಂಡ್ಯದಿಂದ 7 ಕಿ.ಮೀ. ದೂರದಲ್ಲಿರುವ ಹುಲಿವಾನ ಎಂಬ ಗ್ರಾಮ 2003ರಲ್ಲಿ ಈ ಘಟನೆಗಳಿಗೆಲ್ಲಾ ಸಾಕ್ಷಿಯಾಗಬೇಕಾಯಿತು.